ಆಂಗ್ಲರ ಆಳ್ವಿಕೆಯ ಸಂದರ್ಭ ಕನ್ನಡಕ್ಕೆ ಸಿಕ್ಕುತ್ತಿದ್ದ ಅಷ್ಟಿಷ್ಟು ಗೌರವದ ಜೊತೆಗೆ ಸಾಹಿತ್ಯ ದಿಗ್ಗಜರು ಭಾಷಾ ಪ್ರೇಮ, ಸಾಹಿತ್ಯ ಸಂಸ್ಕೃತಿ ಬಗ್ಗೆ ಆಳವಾದ ಚಿಂತನೆಗೆ ತೊಡಗಿದ್ದರು. ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹಲವು ಸಾಹಿತಿಗಳು ಸ್ವಾತಂತ್ರ ಹೋರಾಟದಲ್ಲಿ ನೇರಭಾಗವಹಿಸಿದ್ದರು. ಕಾವ್ಯ, ಕತೆ, ಲೇಖನಗಳ ಮೂಲಕ ಜನಜಾಗೃತಿಗೆ ತೊಡಗಿದರು. ಆದರ್ಶದ ಬೆನ್ನು ಹತ್ತಿ ನಾಡು-ನುಡಿಗೆ ಚಿಂತನೆ ನಡೆಸಿದರು. ಅಂಥವರಲ್ಲಿ ಕವಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು. == ಬಾಲ್ಯ, ಶಿಕ್ಷಣ == ೧೯೦೪ ಆಗಸ್ಟ ೯ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲ ಸಮೀಪದ ಪೆರುವಾಯಿಯಲ್ಲಿ ಶಂಕರಭಟ್ಟರು ಜನಿಸಿದರು. ತಂದೆ ಕೃಷಿಕರು. ಶಂಕರಭಟ್ಟರ ಬಂಧು, ಹಿರಿಯ ಸಂಶೋಧಕ ಮುಳಿಯ ತಿಮ್ಮಪ್ಪಯ್ಯನವರು ಇವರ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟರು. ಮಂಗಳೂರಿನಲ್ಲಿ ಮುಳಿಯ ಅವರ ಮನೆಯಲ್ಲಿದ್ದುಕೊಂಡು ಓದುತ್ತಲೆ, ಸಾಹಿತ್ಯ ಪರಿಸರದಲ್ಲಿ ಬೆರೆತರು. == ಸ್ವಾತಂತ್ರ್ಯ ಹೋರಾಟ == ೧೯೨೦ರಲ್ಲಿಗಾಂಧೀಜಿಯವರು ಮಂಗಳೂರಿಗೆ ಬಂದು ಸಾರ್ವಜನಿಕ ಸಭೆ ಉದ್ದೇಶಿಸಿ ಸ್ವಾತಂತ್ರ ಸಂಗ್ರಾಮಕ್ಕೆ ಭಾಗವಹಿಸಲು ಕರೆಕೊಟ್ಟರು. ಶಂಕರಭಟ್ಟರು ವಿದ್ಯಾಭ್ಯಾಸ ಕುಂಠಿತಗೊಳಿಸಿ ಗಾಂಧೀಜಿಯವರುನೀಡಿದ ಕರೆಗೆ ಓಗೊಟ್ಟು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ಹೋರಾಟದ ಸಂದರ್ಭದಲ್ಲೇ ಪ್ರೌಢಶಿಕ್ಷಣ ಸಹಾ ಮುಗಿಸಿದರು. ನಂತರ ಧಾರವಾಡದ ಶಿಕ್ಷಣ ಸಮಿತಿಯ `ಸ್ನಾತಕ' ಪರೀಕ್ಷೆಯಲ್ಲಿ ಉಚ್ಚ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಲು ವಿದ್ಯಾಭ್ಯಾಸವನ್ನು ತ್ಯಜಿಸಿದವರಿಗಾಗಿ ಕಾರ್ನಾಡ ಸದಾಶಿವರಾಯರು ಮಂಗಳೂರಿನಲ್ಲಿ ಸ್ಥಾಪಿಸಿದ್ದ ತಿಲಕ ವಿದ್ಯಾಲಯವೆಂಬ ರಾಷ್ಟ್ರೀಯ ಪಾಠಶಾಲೆಯಲ್ಲಿ ಶಂಕರಭಟ್ಟರು ಕೆಲಕಾಲ ಅಧ್ಯಾಪಕರಾದರು. == ವೃತ್ತಿ ಜೀವನ == ಆಬಳಿಕ ಪಂಜೆ ಮಂಗೇಶರಾಯರಪ್ರೋತ್ಸಾಹದಿಂದ ೧೯೨೯ರಿಂದ ೧೯೬೪ರ ವರೆಗೆ (೩೫ ವರ್ಷಗಳ ದೀರ್ಘಕಾಲ) ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ಒಲವು ಮೂಡಿಸಲು ಶ್ರಮಿಸಿದರು. == ಪತ್ರಕರ್ತ == ಅಧ್ಯಾಪಕರಾಗುವ ಮೊದಲು ಪತ್ರಿಕೋದ್ಯಮದ ಅನುಭವ ಪಡೆದರು. "ನವಯುಗ"ದಲ್ಲಿ ಪತ್ರಕರ್ತರಾಗಿ ಸೇರಿಕೊಂಡು, ೧೯೨೮ರಲ್ಲಿ "ರಾಷ್ಟ್ರಬಂಧು" ಪತ್ರಿಕೆಯ ಸಂಪಾದಕರಾದರು. ಅಲ್ಲಿಂದ ಅಧ್ಯಾಪಕ ವೃತ್ತಿ ಹಾಗೂ ಪತ್ರಿಕೋದ್ಯಮ ಎರಡರಲ್ಲೂ ಸೇವೆ ಸಲ್ಲಿಸಿದರು. == ಗೌರವ == ೧೯೬೪ರಲ್ಲಿ ಕನ್ನಡ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ಮರುವರ್ಷ,ಕಡೆಂಗೋಡ್ಲು ಶಂಕರಭಟ್ಟರು ಕಾರವಾರದಲ್ಲಿ ನಡೆದ ೪೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ಪಡೆದರು. ೧೯೬೮ರ ಮೇ ೧೭ರಂದು ತಮ್ಮ ಮನೆ ಕಡೆಂಗೋಡ್ಲುವಿನಿಂದ ಮಂಗಳೂರಿಗೆ ಪ್ರಯಾಣ ಹೊರಟಿದ್ದ ಶಂಕರಭಟ್ಟರು, ಬಸ್ಸು ಸುಮಾರು ಒಂದೆರೆಡು ಕಿ. ಮೀ. ದೂರ ಕ್ರಮಿಸಿದಾಗ ಹೃದಯಸ್ತಂಭನವಾಗಿ ಬಸ್ಸಿನಲ್ಲಿಯೇ ನಿಧನರಾದರು. ಅರವತ್ತ ನಾಲ್ಕು ವರ್ಷದ ಶಂಕರಭಟ್ಟರ ಬಹುಮುಖ ಸಾಧನೆಯ ಬದುಕು ಕೊನೆಗೊಂಡಿತು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು (ಎಂಜಿಎಂ), ಗೋವಿಂದ ಪೈ ಸ್ಮಾರಕ ಸಂಶೋಧನಾಕೇಂದ್ರದಿಂದ ಪ್ರತಿವರ್ಷ ಹಸ್ತಪ್ರತಿಯ ಕಾವ್ಯಕ್ಕೆ "ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ" ಕೊಡುತ್ತಾ ಬಂದಿದೆ. ಕಡೆಂಗೋಡ್ಲು ಅವರ ಅಧ್ಯಾಪಕ ವೃತ್ತಿ, ಪತ್ರಿಕಾ ವೃತ್ತಿ, ಸಾಹಿತ್ಯ ಸೇವೆ, ಸ್ವಾತಂತ್ರ ಹೋರಾಟಗಳೆಲ್ಲವನ್ನೂ ಇಂಥ ಪ್ರಶಸ್ತಿ ಕೊಡುವ ಮೂಲಕ ನೆನಪಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. == ಸಾಹಿತ್ಯ == == ಉಲ್ಲೇಖಗಳು ==